ಶ್ರೀ ಮಾವಿನಕಾಯಿನಹಳ್ಳಿ ಪ್ರಾಣದೇವರನ್ನು ಪ್ರತಿಷ್ಟಾಪಿಸಿದ್ದು ಶೀವ್ಯಾಸರಾಜರು. ಹಾಗಾಗಿ ನಾವು ಅವರ ಬಗ್ಗೆ ಮತ್ತು ವೈಷ್ಣವ ಸಿಧ್ಧಾಂತದ ಪುನಃಪ್ರವರ್ತಕರಾದ ಶೀಮನ್ಮಧ್ವಾಚಾರ್ಯರಬಗ್ಗೆ ತಿಳಿದುಕೊಳ್ಳಬೇಕು.

ಶೀಮನ್ಮಧ್ವಾಚಾರ್ಯರು

ಶ್ರೀವ್ಯಾಸರಾಜಮಠವೆಂದು, ವ್ಯಾಸರಾಜರ ಪ್ರಭಾವದ ತೀವ್ರತೆಯಿಂದಾಗಿಹಾಗೂ ಪ್ರಖರತೆಯಿಂದಾಗಿ ಅವರ ಕಾಲದಿಂದೀಚೆಗೆ ಆ ಹೆಸರು ಪ್ರಸಿದ್ದವಾಗಿದ್ದರೂ ವ್ಯಾಸರಾಜ ಸಂಸ್ಥಾನವು ಅದಕ್ಕೂ ಪೂರ್ವದಲ್ಲೇ ಮಹಾನ್ ಪರಂಪರೆಯನ್ನು ಹೊಂದಿತ್ತು ಅದು ಹೀಗಿದೆ

೧ ಹಂಸನಾಮಕ ಪರಮಾತ್ಮ

೨ ಚತುರ್ಮುಖ ಬ್ರಹ್ಮದೇವರು

೩ ಸನಕರು

೪ ದೂರ್ವಾಸರು

೫ ಜ್ಞಾನನಿಧಿಗಳು

೬ ಗರುಡವಾಹನರು

೭ ಕೈವಲ್ಯತೀರ್ಥರು

೮ ಜ್ಞಾನೇಶತೀರ್ಥರು

೯ ಪರತೀರ್ಥರು

೧೦ ಸತ್ಯಪ್ರಜ್ಞತೀರ್ಥರು

೧೧ ಪ್ರಾಜ್ಞತೀರ್ಥರು

೧೨ ಅಚ್ಯುತಪ್ರಜ್ಞತೀರ್ಥರು

ಇವರ ನಂತರ ಹರಿಯ ಆಜ್ಞೆಯಿಂದ ವಾಯುದೇವರು ಆನಂದತೀರ್ಥರಾಗಿ ಅವತರಿಸಿದರು. ಮಧ್ವಾಚಾರ್ಯರು ವೈಷ್ಣವಸಿಧ್ಧಾಂತದ ಪುನಃಪ್ರವರ್ತಕರು. ಅವರ ಸಿಧ್ಧಾಂತಕ್ಕೆ ತತ್ವವಾದ ಎಂದು ಹೆಸರು. ಆದರೆ ಅತಿ ಪ್ರಚಲಿತವಾದ ಹೆಸರು ದ್ವೈತಸಿಧ್ಧಾಂತ ಎಂದು. ಈ ಸಿಧ್ಧಾಂತದ ಪ್ರಚಾರಕ್ಕಾಗಿ ಅವರು ರಚಿಸಿದ ಗ್ರಂಥಗಳೇ ಸರ್ವಮೂಲಗ್ರಂಥಗಳೆನಿಸಿದವು.

ಶ್ರೀ ಮಧ್ವವಿಜಯ ಎಂಬ ಕೃತಿಯು ಶ್ರೀಮಧ್ವಾಚಾರ್ಯರ ಜೀವನ ಚರಿತ್ರೆ. ಈ ಕೃತಿಯು ಮಧ್ವಾಚಾರ್ಯರನ್ನು ಕಣ್ಣಾರೆ ಕಂಡವರು, ಸಮಕಾಲೀನರು ಆದ ನಾರಾಯಣಪಂಡಿತಾಚಾರ್ಯರು ಬರೆದ ಗ್ರಂಥ ಹಾಗಾಗಿ ಇದೂಂದು ಅಧಿಕೃತ ದಾಖಲೆ.

ಈ ಗ್ರಂಥದಲ್ಲಿ ನಾರಾಯಣಪಂಡಿತಾಚಾರ್ಯರು ಮಧ್ವಾಚಾರ್ಯರ ಗ್ರಂಥಗಳ ಬಗ್ಗೆ ಹೀಗೆ ಹೇಳುವರು

ನಾನಾ ಸುಭಾಷಿತ-ಸ್ತೋತ್ರ-ಗಾಥಾದಿ-ಕೃತಿ-ಸತ್ಕೃತೀಃI

ತ್ವಯಿ ರತ್ನಾಕರೇ ರತ್ನ-ಶ್ರೇಣೀರ್ವಾ ಗಣಯಂತಿ ಕೇ II

ಈ ಮೇಲಿನ ಶ್ಲೋಕದ ಅರ್ಥ ಇಂತಿದೆ.

ಕಡಲ ಮುತ್ತುಗಳನ್ನು ಮತ್ತು ಆಚಾರ್ಯರ ಕೃತಿರತ್ನಗಳನ್ನು ಎಣಿಸುವರಾರು? ಎನ್ನುವ ಈ ಉದ್ಗಾರ ಆಚಾರ್ಯರ ಕೃತಿಗಳು ಬರಿಯ ಮೂವತ್ತೇಳಷ್ಟೆ ಅಲ್ಲ ಎನ್ನುವುದನ್ನು ಸ್ಪುಟಪಡಿಸುತ್ತದೆ.

“ಪ್ರಮೇಯನವಮಾಲಿಕಾ”(ಅಣುಮಧ್ವವಿಜಯ) ದಲ್ಲಿ ೨೯ನೇಯ ಶ್ಲೋಕದಲ್ಲಿ “ಶತಗ್ರಂಥಕರ್ತಾ” ಅರ್ಥಾತ್ ನೂರಾರು ಗ್ರಂಥಗಳನ್ನು ರಚಿಸಿದವರು ಎಂಬ ಮಾತು ಇದನ್ನೆ ಸಮರ್ಥಿಸುತ್ತದೆ. ಹಾಗಾಗಿ ಕಾಲವಷಾತ್ ಕೆಲವು ನಷ್ಟವಾಗಿರಬಹುದು.

ಮಧ್ವನವಮಿ

ಆಚಾರ್ಯರು ಅನಂತೇಶ್ವರ ದೇವಾಲಯದಲ್ಲಿ ಪ್ರವಚನ ಮಾಡುತ್ತಿದ್ದಾಗ ಮುಗಿಲಿನಿಂದ ಹೂಮಳೆ ಸುರಿಯಿತು ಎಂದು ಮಧ್ವವಿಜಯ ಮುಗಿಯುತ್ತದೆ. ನಂತರ ವಾದಿರಾಜರ “ಅದೃಶ್ಯೋ ರೂಪ್ಯಪೀಠೇSಸ್ತಿ ದೃಶ್ಯೋSಸ್ತಿ ಬದರೀತಳೇ” ಎಂಬ ಮಾತನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಕೆಲವರು ಆಚಾರ್ಯರು ಆ ಪುಷ್ಪರಾಶಿಯಲ್ಲಿ ಅದೃಶ್ಯರಾಗಿ ಬದರಿಗೆ ತೆರಳಿದರು ಎಂದು ಸುಳ್ಳು ಕಥೆ ಕಟ್ಟಿದರು. ವಾದಿರಾಜರ ಮಾತಿನ ಅರ್ಥ ಆಚಾರ್ಯರು ಅದೃಶ್ಯರಾಗಿ (ಕಣ್ಣಿಗೆ ಕಾಣದಂತೆ) ರೂಪ್ಯಪೀಠದಲ್ಲಿ(ಉಡುಪಿ) ಅಸ್ತಿ ಇದ್ದಾರೆ. ಹಾಗೆಯೆ ದೃಶ್ಯರಾಗಿ(ಕಣ್ಣಿಗೆ ಕಾಣುವಹಾಗೆ) ಉತ್ತರ ಬದರಿಯಲ್ಲಿ ಇದ್ದಾರೆ ಎಂದು. ವಾಯುಪುರಾಣದಲ್ಲಿ ಬರುವ ಅಣುಮಧ್ವಚರಿತದಲ್ಲಿ

“ಏಕೋನಾಶೀತಿವರ್ಷಾಣಿ ನೀತ್ವಾಮಾನುಷದೃಷ್ಟಿಗಃ I

ಪಿಂಗಲಾಬ್ದೇ ಮಾಘಶುಧ್ಧನವಮ್ಯಾಂ ಬದರೀಂ ಯಯೌII”

ಎಂದು ಬರುತ್ತದೆ ಇದರ ಅರ್ಥ ಆಚಾರ್ಯರು ಮನುಷ್ಯರ ಕಣ್ಣಿಗೆ ಕಾಣಿಸಿದ್ದು ಏಕೋನಾಶೀತಿವರ್ಷಾಣಿ ಅಂದರೆ ೭೯(79) ವರ್ಷಗಳು ನಂತರ ಪಿಂಗಳ ಸಂವತ್ಸರದ ಮಾಘ ಶುಧ್ಧ ನವಮಿಯಂದು ಬದರಿಗೆ ತೆರಳಿದರು ಇಲ್ಲಿ ಅದೃಶ್ಯರಾದರು ಎಂಬ ಮಾತೇ ಇಲ್ಲ. ಈ ದಿನವೇ ಮಧ್ವನವಮಿ ಎಂದಾಯಿತು.

ಇದೆ ಪ್ರಸಂಗ ನಾರಾಯಣಪಂಡಿತಾಚಾರ್ಯರ ಭಾವಪ್ರಕಾಶಿಕಾದಲ್ಲಿ(ಮಧ್ವವಿಜಯದ ಟೀಕೆ)

“ತುಳಸೀಪ್ರಸವಚ್ಛಟಯೈಕ್ಷ್ಯತ ಪುಂಭಿರಸೌ” ಎಂದು ಹೇಳುತ್ತಾರೆ ಇದರ ಅರ್ಥ ಪುಷ್ಪವೃಷ್ಟಿ ಆದ ಬಳಿಕ ಅಲ್ಲಿರುವ ಜನರೆಲ್ಲರು ಆಚಾರ್ಯರ ಕೊರಳಲ್ಲಿ ದೆವಲೋಕದ ತುಳಸಿಮಾಲೆಯನ್ನು ಕಣ್ಣಾರೆ ಕಂಡರು. ಅದೃಶ್ಯರಾಗಿದ್ದರೆ, ಅವರೆಲ್ಲರು ಹೇಗೆ ದೆವಲೋಕದ ತುಳಸಿ ಮಾಲೆಯನ್ನು ಕಂಡರು.ಈ ಎಲ್ಲಾ ಪ್ರಮಾಣಗಳಿಂದ ಆಚಾರ್ಯರು ಅದೃಶ್ಯರಾಗಿಲ್ಲ. ಪಿಂಗಳ ಸಂವತ್ಸರದ ಮಾಘ ಶುಧ್ಧ ನವಮಿಯಂದು ಬದರಿಗೆ ತೆರಳಿದರು ಆ ದಿನವೇ ನಮಗೆ ಮಧ್ವನವಮಿಯಾಯಿತು.

ಶ್ರೀ ವ್ಯಾಸರಾಜರು

ಆಚಾರ್ಯರ ನಂತರ ಹನ್ನೆರಡವನೆಯರಾಗಿ ವ್ಯಾಸರಾಜರು ಅವತರಿಸಿದರು ಆಚಾರ್ಯರ ಮತ್ತು ವ್ಯಾಸರಾಜರ ನಡುವಿನ ಪರಂಪರೆ ಹೀಗಿದೆ.

ಶ್ರೀ ಪದ್ಮನಾಭ ತೀರ್ಥರು

ಶ್ರೀ ನರಹರಿ ತೀರ್ಥರು

ಶ್ರೀ ಮಾಧವ ತೀರ್ಥರು

ಶ್ರೀ ಅಕ್ಷೋಭ್ಯ ತೀರ್ಥರು

ಶ್ರೀ ಜಯತೀರ್ಥರು

ಶ್ರೀ ವಿಧ್ಯಾಧಿರಾಜ ತೀರ್ಥರು

ಶ್ರೀ ರಾಜೇಂದ್ರ ತೀರ್ಥರು

ಶ್ರೀ ಜಯಧ್ವಜ ತೀರ್ಥರು

ಶ್ರೀ ಪುರುಷೋತ್ತಮ ತೀರ್ಥರು

ಶ್ರೀ ಬ್ರಹ್ಮಣ್ಯ ತೀರ್ಥರು

ನಂತರ ಶ್ರೀಹರಿಯ ಅನುಗ್ರಹದಿಂದ ಪ್ರಹ್ಲಾದರಾಜರು ವ್ಯಾಸರಾಜರಾಗಿ ಅವತರಿಸಿದರು.

ವಿಜಯನಗರ ಸಾಮ್ರಾಜ್ಯದ ರಾಜಗುರುಗಳಾಗಿದ್ದ, ಮಧ್ವಾಚಾರ್ಯರ ಮಹಾನ್ ಪರಂಪರೆಯ ವೇದಾಂತ ಸಾಮ್ರಾಜ್ಯದ ಪೀಠಾದಿಪತಿಗಳಾಗಿದ್ದ, ವಿಶ್ವ ಪಾವನಮಠದ ಕುಲಪತಿಗಳಾಗಿದ್ದ ಶ್ರೀ ವ್ಯಾಸರಾಜರ ಬದುಕೆಲ್ಲ ವರ್ಣರಂಜಿತ. ಅವರ ಕೀರ್ತಿಚಂದನ ವಿಶ್ವದ ಗಾಳಿಯಲ್ಲಿ ಹರಡಿ ಶತಶತಮಾನಗಳ ಹಾಡಾಗಿ, ವ್ಯಾಸಸಂಭ್ರಮವನ್ನು ಎಲ್ಲೆಡೆಯೂ ಪ್ರಸರಿಸುತ್ತಿದೆ.

ಸಾರಸ್ವತ ಪ್ರಪಂಚದ ರತ್ನತ್ರಯಗಳೆಂದೇ ಖ್ಯಾತವಾದ ಚಂದ್ರಿಕಾ ನ್ಯಾಯಾಮೃತ ತರ್ಕತಾಂಡವ ಎಂಬ ಸದ್ಗ್ರಂಥಗಳನ್ನು ರಚಿಸಿ ಆಚಾರ್ಯರ ಸತ್ಸಿಧಾಂತವನ್ನು ಜಗತ್ತಿನ ಉತ್ತುಂಗ ಶೃಂಗದೆತ್ತರಕ್ಕೆ ಎತ್ತಿಹಿಡಿದು, ತಮ್ಮ ಭಕ್ತಿಗೀತೆಗಳಿಂದ ಭಗವಂತನನ್ನು ಪರಿಪರಿಯಾಗಿ ಅಲಂಕರಿಸಿದ ಮಹಾನುಭಾವರು ಶ್ರೀ ವ್ಯಾಸರಾಜರು.

ನ್ಯಾಯಾಮೃತ ತರ್ಕತಾಂಡವ ಚಂದ್ರಿಕೆಗಳನ್ನು ರಚಿಸಿದ ಹೃದಯದಿಂದಲೇ ಕನ್ನಡ ಪದಪದ್ಯ ಸುಳಾದಿಗಳನ್ನು ರಚಿಸಿ ಸಂಸ್ಕೃತ ಶ್ಲೂಕಗಳ ಮಂತ್ರಸಿದ್ದಿಯನ್ನು ದಾಸಸಾಹಿತ್ಯಕ್ಕೆ ಧಾರೆಯೆರೆದರು . ವ್ಯಾಸರಾಜರು ಪುರಂದರದಾಸರು ಮತ್ತು ಕನಕದಾಸರಂತವರಿಗೆ ದಾಸದೀಕ್ಶೇ ನೀಡಿದವರು. ನಂತರ ಶ್ರೀ ವ್ಯಾಸರಾಜರು ತಿರುಪತಿ ಕ್ಷೇತ್ರದಲ್ಲಿ ಹನ್ನೆರಡು ವರ್ಷಗಳ ಕಾಲ ತಿರುಮಲೇಶನನ್ನು ಪೂಜಿಸಿದ ಮಹಾನುಭಾವರು.

732 ಪ್ರಾಣಪ್ರತೀಕಳು

ಅಪರೋಕ್ಷಜ್ಞಾನಿಗಳಾದ ವ್ಯಾಸರಾಜರ ಶಿಷ್ಯರಾದ ವಿಜಯೀಂದ್ರತೀರ್ಥಸ್ವಾಮಿಗಳು “ದ್ವಾತ್ರಿಂಶತ್ಸಪ್ತಶತಕೆ ಮೂರ್ತಿ ಹನುಮತಃ ಪ್ರಭೋ ಪ್ರತಿಷ್ಠಾತ ಸೃತಿಖ್ಯಾತಸ್ತಂಭಜೇ”ಎಂದು ಹೇಳಿ ಶ್ರೀವ್ಯಾಸರಾಜರು ೭೩೨(732) ಪ್ರಾಣಪ್ರತೀಕಗಳನ್ನು ಪ್ರತಿಷ್ಟಾಪಿಸಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಹಾಗೆಯೇ ವ್ಯಾಸರಾಜರ ಪರಂಪರೆಯಲ್ಲಿ ಬಂದ ವಿದ್ಯಾರತ್ನಾಕರತಿರ್ಥರು ಕೂಡ “ಸಪ್ತಶತಂ ಪ್ಲವಂಗಮ ತವೇಃ ದ್ವಾತ್ರಿಂಶದ ಪೂಂಜನಾ, ಸೂನೋರ್ನಿರ್ಮಮ ಈಶ ತೋಣಕೃತೇ ರೌದ್ರ್ಯಾಹ್ವಯೋಬ್ದೇಶಕೇ” ಎಂದು ಹೇಳಿ ಈ ವಿಷಯವನ್ನು ಮತ್ತಷ್ಟು ಸ್ಪಷ್ಟ ಪಡಿಸಿದ್ದಾರೆ.

ಶ್ರೀ ವ್ಯಾಸರಾಜರು ಮೊದಲು ಪ್ರತಿಷ್ಠಾಪಿಸಿದ ಪ್ರಾಣದೇವರೇ ಚಕ್ರತೀರ್ಥದ ಯಂತ್ರೋದ್ಧಾರಕ ಪ್ರಾಣದೇವರು. ನಂತರ ಅವರು ದೇಶಾದ್ಯಂತ ಪ್ರಾಣಪ್ರತೀಕಗಳನ್ನು ಪ್ರತಿಷ್ಠಾಪಿಸತೊಡಗಿದರು ಇದರಲ್ಲಿ ಮಾವಿನಕಾಯಿನಹಳ್ಳಿಯ ಉತ್ತರಪಿನಾಕಿನಿ ನದಿಯ ತಟದ ಪ್ರಾಣದೇವರು ಒಂದು. ಹಾಗಾಗಿ ಭಕ್ತರೆಲ್ಲರು ಆಗಮಿಸಿ ಪ್ರಾಣದೇವರ ಸೇವೆಗೈದು ಅವನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿಸುತ್ತಿದ್ದೇವೆ.